ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ. 14, 15 ರಂದು ಆಯೋಜಿಸಿದ್ದ  ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ

ಹರಿಹರ ಗುರುಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಹಾಗೂ ದೇಶದಲ್ಲಿ ಓಮಿಕ್ರಾನ್ ಭೀತಿ  ಜತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಾವಳಿ ಪಾಲನೆ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನವನ್ನು ಇಂದು ಗುರುಪೀಠದಲ್ಲಿ ನಡೆದ ಸಮುದಾಯದ ಮುಖಂಡ ಸಭೆ ಕೈಗೊಂಡಿದೆ ಎಂದು ತಿಳಿಸಿದರು.

 

ಹರಿಹರ ಪೀಠದ ನಮ್ಮ ಹರಕ್ಷೇತ್ರದಲ್ಲಿ ಹರಜಾತ್ರೆ ಆಯೋಜಿಸುತ್ತಾ ಬರಲಾಗಿದೆ. ಆದರೆ ಓಮಿಕ್ರಾನ್ ಭೀತಿ ಹೆಚ್ಚಿದೆ, ಸರಕಾರ ಕೂಡ ಹಲವು ನಿಯಮಾವಳಿ ರೂಪಿಸಿ ನಿಬರ್ಂಧ ಹೇರಿದೆ. ನಮ್ಮ ಪೀಠ ಸರಕಾರದ ಜತೆ ಮತ್ತು ಜನರ ಜತೆ ಇರಲಿದೆ. ಹಾಗಾಗಿ ತಾತ್ಕಾಲಿಕ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ನಂತರ  ಮುಂದಿನ ಹರಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.

 

ಜಾತ್ರೆ ಎಂದರೆ ನೂರಾರು ವರ್ಷಗಳ ಇತಿಹಾಸವಿರುವ ಮಠಗಳಲ್ಲಿ ನಡೆಯುವ ತೇರು, ರಥೋತ್ಸವದ ಮಾದರಿ ನಮ್ಮ ಹರಜಾತ್ರೆಯಲ್ಲಿ ಇರುವುದಿಲ್ಲ.ಭಕ್ತರು, ಸಮುದಾಯವನ್ನು ಒಗ್ಗೂಡಿಸಲು ಜಾತ್ರೆ ಪದವನ್ನು ಮಾತ್ರೆ ತೆಗೆದುಕೊಂಡಿದ್ದೇವೆ. ಸಮಕಾಲೀನ ವಿಷಯಗಳ ಚರ್ಚೆ ಹರಜಾತ್ರೆಯಲ್ಲಿ ನಡೆಯಲಿದೆ. ಈ ಬಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀಡುವವರು ಮತ್ತು ಪಡೆಯುವವರ ಸೇರಿ ಉದ್ಯೋಗ ಮೇಳ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

 

ಹರಮಾಲೆ ಸಂಕಲ್ಪ ಸಮರ್ಪಣೆ

ಹರಜಾತ್ರೆ ಹಿನ್ನೆಲೆ ಹರಮಾಲೆ ಅಯೋಜಿಸಲಾಗಿತ್ತು, ಹಲವಾರು ಜನ 21 ದಿನದ ಹಿಂದೆ ಹರಮಾಲೆ ಧರಿಸಿದ್ದರು. ಜ. 14 ರಂದು ಇಲ್ಲಿಗೆ ಆಗಮಿಸುವ ಮಾಲಾಧಾರಿಗಳು ‘ಹರಮಾಲೆ ಸಂಕಲ್ಪ ಸಮರ್ಪಣೆ’ ಮಾಡಲಾಗುತ್ತಿತ್ತು. ಜಾತ್ರೆ ಮುಂದೂಡಿರುವುದರಿಂದ ಮಾಲಾಧಾರಿಗಳು ಅವರವರ ಮನೆಯಲ್ಲಿಯೇ ಹರಮಾಲೆ ಸಂಕಲ್ಪ ಸಮರ್ಪಣೆ  ಮಾಡಬೇಕು. ಇನ್ಮುಂದೆ ರುದ್ರಾಕ್ಷಿ ಮಾಲೆ ತೊಟ್ಟು ಪ್ರತಿದಿನ ಹರಮಂತ್ರ ಪಠಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

 

ಹರಜಾತ್ರೆ ಆಹ್ವಾನ ಪತ್ರಿಕೆ ನೋಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಠ, ಪಂಚಮಸಾಲಿ ಸಮಾಜ ಹಾಗೂ ನಮ್ಮ ಯೋಗದ ಬಗ್ಗೆ ಮಾಹಿತಿ ಪಡೆದು ಕರೆ ಮಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನಾವು ಅವರಿಗೆ ನಮ್ಮ ಸಮಾಜದ ಬೆಳವಡಿ ರಾಣಿ ಮಲ್ಲಮ್ಮ ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ,ದಂಡಿ ಸತ್ಯಾಗ್ರಹದಲ್ಲಿ ಮಹಾತ್ಮಾಗಾಂಧೀಜಿ ಜತೆಯಲ್ಲಿದ್ದ ನಮ್ಮ ಮೈಲಾರ ಮಹಾದೇವ ಇವರೆಲ್ಲಾ ಪಂಚಮಸಾಲಿ ಸಮಾಜದವರು, ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಾವು ಮಾಹಿತಿ ನೀಡಿದೆ. ಹರಜಾತ್ರೆ ಮುಂದೂಡಲು ಅವರು ಸಲಹೆ ನೀಡಿದರು, ಮುಂದಿನ ಜಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ನಾಗನಗೌಡ್ರು,ಪಿ ಡಿ ಶಿರೂರ, ಚಂದ್ರಶೇಖರ ಪೂಜಾರ,ಸೋಮನಗೌಡ ಪಾಟೀಲ,ಮಹೇಶ ಹಾವೇರಿ,ಪ್ರಕಾಶ್ ಪಾಟೀಲ,ಬಸವನಗೌಡ್ರು ತೊಂಡಿಹಾಳ, ಶ್ರೀಮತಿ ವಸಂತಾ ಹುಲ್ಲತ್ತಿ,ಸುನಂದಮ್ಮ,ಗೀತಮ್ಮ ಇತರರು ಇದ್ದರು.