ನಾಡಿನ ಅಕ್ಷರಯೋಗಿ.
ಉತ್ತರ ಕರ್ನಾಟಕದ ಶಿಕ್ಷಣ ದಾರಿದ್ರ್ಯವನ್ನು ತೊಲಗಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್‌ಸುಧಾರಕ.
ಹೆಸರು ಅರಟಾಳ ರುದ್ರಗೌಡರು.

ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಮಾಡಿದವರು. ಧಾರವಾಡ ಶಿಕ್ಷಣ ಕಾಶಿ ಎಂದು ಕರೆಸಿಕೊಳ್ಳುವಲ್ಲಿ ಅರಟಾಳ ರುದ್ರಗೌಡರ ಕೊಡುಗೆ ಅಪಾರವಾಗಿದೆ. ಅಷ್ಟೇ ಅಲ್ಲ ಉತ್ತರಕರ್ನಾಟಕ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ನಲುಗುತಿದ್ದಾಗ ಆ ಕೊರತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅರಟಾಳ ರುದ್ರಗೌಡರು. ಹೇಳಬೇಕೆಂದ್ರೆ ೧೯೧೦ರವರೆಗೆ ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. ಇದನ್ನರಿತ ಅರಟಾಳ ರುದ್ರಗೌಡರು ಆಗಿನ ಬ್ರಿಟಿಷ್‌ಕಲೆಕ್ಟರುಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಬ್ರಿಟಿಷ್‌ಕಲೆಕ್ಟರ್‌ಗಳು ಒಂದು ಷರತ್ತು ಹಾಕಿದ್ದರು. ಶಿಕ್ಷಣ ಸಂಸ್ಥೆ ಆರಂಭಿಸಲು ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕು ಅನ್ನೋದೆ ಆ ಷರತ್ತು. ಷರತ್ತನ್ನು ಸವಾಲಾಗಿ ಸ್ವೀಕರಿಸಿದ ಅರಟಾಳ ರುದ್ರಗೌಡರು ೧.೭೦ ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜನ್ನ ಆರಂಭ ಮಾಡಿದ್ದರು.
ಧಾರವಾಡದಲ್ಲಿ ಜೂನ್‌೨೦, ೧೯೧೭ರಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆ, ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸೆಂಟ್ರಲ್‌ಕೋಆಪರೇಟಿವ್ ಬ್ಯಾಂಕ್‌ಸ್ಥಾಪನೆ, ಬೆಳಗಾವಿಯಲ್ಲಿನ ಕೆ.ಎಲ್‌.ಇ ಸಂಸ್ಥೆ ಪ್ರಾರಂಭಕ್ಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿದರು. ಕೆ.ಎಲ್‌.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಗದಗಿನಲ್ಲಿ ತೋಂಟದಾರ್ಯ ಸಂಸ್ಕ್ರತ ಶಾಲೆ, 1883 ರಲ್ಲಿ ಧಾರವಾಡದಲ್ಲಿ ಲಿಂಗಾಯತ ಎಜುಕೇಶನ್ ಸಂಸ್ಥೆ, ಮಹಾರಾಷ್ಟ್ರದ ಕೋಲ್ಹಾಪುರ ಲಿಂಗಾಯತ ಎಜುಕೇಶನ್ ಸಂಸ್ಥೆ, ಮುಂಬೈನಲ್ಲಿ ಲಿಂಗಾಯತ ಮಠಕ್ಕೆ ನಿಧಿ ಸಂಗ್ರಹಣೆ, ಹಾವೇರಿಯ ಹಿರೆಕೇರೂರಿನಲ್ಲಿ ಇಂಗ್ಲಿಷ್ ಶಾಲೆ, ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ತರಬೇತಿ ಕೆಂದ್ರ, ಹುಬ್ಬಳ್ಳಿಯಲ್ಲಿ ಲಿಂಗಾಯತ ವಿಲಾಸ ಮುದ್ರಣಾಲಯ, ಇವೆಲ್ಲವೂ ಅರಟಾಳ ರುದ್ರಗೌಡ್ರು ಕೊಡುಗೆಗಳಾಗಿವೆ.
ಇಂಥ ಶಿಕ್ಷಣ ಪ್ರೇಮಿ, ಶಿಕ್ಷಣ ಸುಧಾರಕ ಅರಟಾಳ ರುದ್ರಗೌಡರು ಜನಿಸಿದ್ದು ಮಾರ್ಚ್‌೨೨ ೧೮೫೧ರಲ್ಲಿ. ಹುಟ್ಟೂರು ಕುಂದಗೋಳ ತಾಲೂಕಿನ ಅರಟಾಳ ಗ್ರಾಮ.
ನಮ್ಮ ನಾಡಿಗೆ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವುದು ನಾಡಿನ ಎಲ್ಲ ಜನರ ಕರ್ತವ್ಯವೂ ಹೌದು.
ಜವಾಬ್ದಾರಿಯೂ ಹೌದು.

ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.